ಅಂಗರಿಕೆ ಮಾಳ

ಕೃಷಿ ಜೀವ ವೈವಿಧ್ಯ ಮತ್ತು ಸಂರಕ್ಷಣೆಯ ಪ್ರಾತ್ಯಕ್ಷಿಕಾ ಸ್ಥಳ
ಇದು ನಾಗವಳ್ಳಿ ಗ್ರಾಮದಲ್ಲಿರುವ ಪುನರ್ಚಿತ್‌ನ ಸಂಪನ್ಮೂಲ ಕೇಂದ್ರದಿಂದ ೨.೩ ಕಿ.ಮೀ. ದೂರದಲ್ಲಿರುವ ಪುಟ್ಟನಪುರ ಗ್ರಾಮಕ್ಕೆ ಸೇರಿದೆ. ಈ ಭೂಮಿ ತುಂಬಾ ಕಳಪೆ ಮತ್ತು ದುರ್ಬಳಕೆಯಾಗಿದ್ದು (೬.೭೫ ಎಕರೆ) ಈ ಭೂಮಿಯನ್ನು ಪುನರ್ಚಿತ್ ಖರೀದಿ ಮಾಡಿದೆ. ಈ ಭೂಮಿಯನ್ನು ೨೦೧೪ ರಲ್ಲಿ ಖರೀದಿ ಮಾಡಿದ್ದು, ಏಪ್ರಿಲ್ ೨೦೧೫ ರಲ್ಲಿ ಕಾನೂನಿನ ಅನ್ವಯ ನೊಂದಣಿ ಆಗಿದೆ. ಭೂಮಿಯ ಅನ್ಯಾಕ್ರಾಂತತೆ ಮತ್ತಿತ್ತರ ಪ್ರಕ್ರಿಯೆಗಳನ್ನು ಯಾವುದೇ ಲಂಚ ನೀಡದೆ, ಕಾನೂನು ಪ್ರಕಾರ ಮಾಡಿಸಲಾಗಿದೆ. ಈ ಭೂಮಿಯ ಹಸಿರು ನಕ್ಷೆಯನ್ನು ವಿವರವಾಗಿ ಸುನಿತಾರಾವ್ ಮತ್ತು ಅಲೆಕ್ಷ ಬೊವಾರ್ಡ್ ಮಾಡಿದ್ದಾರೆ ; ಭೂಮಿಗೆ ಸಂಬಂಧಿಸಿದಂತೆ ವಿಶೇಷವಾದ ಮಾರ್ಗದರ್ಶನ ಮತ್ತು ಸಲಹೆಗಳನ್ನು ಮೈಸೂರಿನ ಯು.ರವಿಕುಮಾರ ಮತ್ತು ಲಲಿತ, ಚಾಮರಾಜನಗರ ಜಿಲ್ಲೆಯ ಸಾವಯವ ಕೃಷಿಕ ಶಿವಕುಮಾರಸ್ವಾಮಿ ನೀಡಿದ್ದಾರೆ. ಪಿ.ವೀರಭದ್ರನಾಯ್ಕ ಮತ್ತು ಮುತ್ತುರಾಜ್ ಅವರು ಧೃಡವಾಗಿವಾಗಿ ನಿಂತು ಮತ್ತು ಕಠಿಣ ಪರಿಶ್ರಮದ ಮೂಲಕ ಕೃಷಿ ಭೂಮಿಯನ್ನು ಹಸಿರುಗೊಳಿಸಿದ್ದಾರೆ.
ಮಳೆ ನೀರು ಸಂಗ್ರಹಕ್ಕೆ ಬದುಗಳ ನಿರ್ಮಾಣ, ಬೇಲಿ (ಜಾನುವಾರುಗಳ ಹಾವಳಿ ಮತ್ತು ಅನವಶ್ಯಕ ವ್ಯಕ್ತಿಗಳ ಪ್ರವೇಶವನ್ನು ತಡೆಗಟ್ಟಲು) ಮತ್ತು ಗೇಟ್ ನಿರ್ಮಾಣ ಮಾಡಲಾಗಿದೆ.ಶಿಥಿಲವಾಗಿದ್ದ ನೀರಿನ ಮನೆಯನ್ನು (ಪಂಪ್ ಔಸ್) ಜೀರ್ಣೋದ್ಧಾರ (ಹೊಸ ಸ್ಥಿತಿಗೆ) ಕೆಲಸ ಮಾಡಲಾಗಿದೆ. ಇದನ್ನು ವ್ಯವಸಾಯ ಸಾಮಾಗ್ರಿಗಳನ್ನು ಇಡುವ ಮತ್ತು ಬೀಜದ ಕೊಠಡಿಯಾಗಿ ಬಳಸಲಾಗುತ್ತಿದೆ. ಈ ಕೊಠಡಿಯ ಮುಂದುವರಿದ ಭಾಗವು ತುಂಬಾ ಶಿಥಿಲವಾಗಿದ್ದು, ಅದರ ಗೋಡೆಯನ್ನು ಸರಿಪಡಿಸಿ, ತೆಂಗಿನ ಗರಿಗಳನ್ನು ಹಾಕಿ ತಾತ್ಕಾಲಿಕವಾಗಿ ತರಗತಿಗಾಗಿ ಬಳಸಿಕೊಳ್ಳಲಾಗುತ್ತಿದೆ. ೨೦೧೫ರ ಕೃಷಿ ಅವಧಿಯಲ್ಲಿ ಎರಡು ಹಂತದಲ್ಲಿ ಭೂಮಿಗೆ ನವಧಾನ್ಯಗಳನ್ನು (೦೩ ದ್ವಿ-ದಳ ಧಾನ್ಯಗಳು, ೦೩ ಎಣ್ಣೆ ಕಾಳುಗಳು, ೦೩ ಸಿರಿಧಾನ್ಯಗಳು) ಹಾಕಿ, ಹೂವು ಬಿಟ್ಟ ತಕ್ಷಣ ಭೂಮಿಗೆ ಹೊದಿಕೆ (ಮಲ್ಚಿಂಗ್) ಮಾಡಲಾಗಿದೆ. ನಿಗದಿತವಾಗಿ ಮಣ್ಣು ಪರೀಕ್ಷೆ ಮಾಡಿಸುತ್ತಿದ್ದು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಹ್ಯೂಮಸ್, ಸಾರಜನಕ, ರಂಜಕ ಮತ್ತು ಪೊಟಾಸಿಯಂ ಮಟ್ಟ ಪ್ರಗತಿಯಾಗಿದೆ. ೨೦೧೬ ರ ಮುಂಗಾರು ಅಥವಾ ಖಾರಿಫ್ ಬೆಳೆಯಲ್ಲಿ ದ್ವಿ-ದಳ ಧಾನ್ಯಗಳ (ಹೆಸರು, ಕೆಂಪು ಮತ್ತು ಬಿಳಿ ಅಲಸಂದೆ, ಉದ್ದು) ಚೆನ್ನಾಗಿ ಬಂದಿದೆ. ಈ ಬೆಳೆಗಳನ್ನು ನಮಗೆ ನೆರವು ನೀಡಿದವರಿಗೆ ಮತ್ತು ಸ್ನೇಹಿತರಿಗೆ ತುಂಬಾ ಸಂತೋಷದಿಂದ ಹಂಚಿಕೊಂಡೆವು.
ಅಂಗರಿಕೆ ಮಾಳದ ಕಿರು ದೃಶ್ಯ ಚಿತ್ರಾವಳಿ ನೋಡಿ
Duration: 3:38 min. Credit: Raj
ಭೂಮಿ ಮೇಲ್ಭಾಗದ ಎತ್ತರ ಪ್ರದೇಶದಲ್ಲಿ ಕಲ್ಲುಮಿಶ್ರಿತ ಗುಡ್ಡಗಾಡಾಗಿದ್ದು, ಕಲ್ಲು ಗಣಿಗಾರಿಕೆ (ಕೋರೆ) ನಡೆದಿರುವ ಪ್ರದೇಶದಲ್ಲಿ ಸಾಕಷ್ಟು ಕೆಲಸ ಮಾಡಬೇಕಾಗಿದೆ, ಈ ಪ್ರದೇಶದಲ್ಲಿನ ಮಣ್ಣಿನ ಸವಕಳಿಯನ್ನು ತಡೆಗಟ್ಟಲು ಸೂಕ್ತ ವಿಧಾನವನ್ನು ಬಳಸಬೇಕಿದೆ. ಇದು ಮರಳು ಮಿಶ್ರಿತ ಮಣ್ಣು ಪ್ರದೇಶವಾಗಿದ್ದು, ನೀರನ್ನು ಹಿಡಿದಿಡುವ ಸಮಸ್ಯೆ ಇರುವುದರಿಂದ ಇಲ್ಲಿನ ಅಂತರ್ಜಲದ ಮಟ್ಟ ಹೆಚ್ಚುವ ಸಾಧ್ಯತೆ ಕಡಿಮೆ.
ಈ ಭೂಮಿಯನ್ನು ಪುನರುಜ್ಜೀವನಗೊಳಿಸಿ ಸಮಗ್ರ ಕಲಿಕಾರ್ಥಿಗಳು, ರೈತರು ಮತ್ತು ಆಸಕ್ತ ಜನರಿಗೆ ಮಾದರಿ ಪ್ರಾತ್ಯಕ್ಷಿಕ ಸ್ಥಳವಾಗಿ ರೂಪಿಸಲಾಗುವುದು. ಮುಂದಿನ ನಮ್ಮ ಯೋಜನೆಯಲ್ಲಿ ಭೂಮಿಯನ್ನು ಪುನಶ್ಚೇತನಗೊಳಿಸಿ ಕೃಷಿ-ಜೀವವೈವಿಧ್ಯತೆಯ ಸರಂಕ್ಷಣೆಯ ಪ್ರಾತ್ಯಕ್ಷಿಕ ಸ್ಥಳವಾಗಿ ಬದಲಾಯಿಸಲಾಗುತ್ತದೆ ಮತ್ತು ಸ್ಥಳೀಯರಿಗೆ ಮತ್ತು ಸ್ಥಳೀಯರೇತರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಭೂಮಿಯಲ್ಲಿ ಕೆಲಸ ನಿರಂತರವಾಗಿ ನಡೆಯುತ್ತಿದ್ದು; ಮಣ್ಣಿನಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಪ್ರಗತಿ ಬಗ್ಗೆ ದಾಖಲು ಮಾಡಲಾಗುತ್ತಿದೆ. ಭೂಮಿಯಲ್ಲಿ ಬದುಗಳ ನಿರ್ಮಾಣದ ಕೆಲಸಗಳು, ಗಿಡ-ಮರಗಳನ್ನು ಹಾಕುವುದು, ಪ್ರತಿ ವರ್ಷ ಎರಡು ಸಲ ಕೃಷಿ ಮಾಡಲಾಗುತ್ತಿದೆ. ಭೂಮಿಯಲ್ಲಿ ಬೆಳೆಯುವ ಆಹಾರದ ಬೆಳಗಳು ಮತ್ತು ಗಿಡ-ಮರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಮಳೆ ಬೀಳುತ್ತಿಲ್ಲ ಮತ್ತು ಬೇರೆ ನೀರಿನ ಮೂಲಗಳು ಇಲ್ಲದಿರುವುದರಿಂದ ಬೆಳೆ ಬೆಳೆಯುವುದು ಕಷ್ಟವಾಗುತ್ತಿದೆ. ಪೂರ್ವ ಮುಂಗಾರು ಮಳೆ ಬಿದಿದ್ದರಿಂದ ಭೂಮಿಯಲ್ಲಿ ಮರಗಿಡಗಳು ಹಸಿರಿನಿಂದ ಕೂಡಿದ್ದು, ಕಾಡು ಹೂಗಳು ಅರಳಿದ್ದು, ಬಳ್ಳಿಗಳು ತಮ್ಮ ಇರುವಿಕೆಯನ್ನು ಪ್ರತಿಬಿಂಬಿಸುತ್ತಿವೆ. ಆದರೆ ಮತ್ತೇ ಮಳೆ ಬೀಳುವುದು ನಿಂತಿದ್ದರಿಂದ ಬೆಳೆಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗಿವೆ. ಹವಮಾನ ಕುರಿತು ಮಾಹಿತಿ ವಿಶ್ಲೇಷಣೆ ಮಾಡುತ್ತಿದ್ದು ಮತ್ತು ಅಂಗರಿಕೆ ಮಾಳವನ್ನು ಸುಸ್ಥಿರ ಪರಿಸರ ನಿರ್ಮಾಣ ಮತ್ತು ಆರ್ಥಿಕವಾಗಿ ಬಾಳಿಕೆ ಇರುವಂತಹ ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದು ಹೇಗೆ ಎಂಬುದರ ಬಗ್ಗೆ ಚಿಂತಿಸಲಾಗುತ್ತಿದೆ.

೨೦೨೦

ಕಳೆದ ೫ ವರ್ಷಗಳಲ್ಲಿ ಅಂಗರಿಕೆ ಮಾಳದಲ್ಲಿ ಕೈಗೊಂಡ ಪುನಶ್ಚೇತನ ಮತ್ತು ಸಂರಕ್ಷಣೆ ಕೆಲಸದಿಂದ ಸಾಕಷ್ಟು ಬದಲಾವಣೆಗಳಾಗಿವೆ. ಈ ವರ್ಷ ಸಾಧಾರಣಾ ಮಳೆಯಿಂದಾಗಿ ಭೂಮಿಯಲ್ಲಿ ಹೊಸದಾಗಿ ಅಣಬೆಗಳು, ವಿವಿಧ ರೀತಿಯ ಬಳ್ಳಿಗಳು, ಹೂಗಳು, ಪೊದೆಗಳು ಮತ್ತು ಹಲವು ರೀತಿಯ ಹುಲ್ಲುಗಳು ಕಾಣಿಸಿಕೊಂಡಿವೆ. ಬೇವಿನ ಮರದಲ್ಲಿ ಕಟ್ಟಿದ್ದ ಗೀಜಗದ ಗೂಡು ಮತ್ತು ಜೇನಿನ ಗೂಡು ವಿಶೇಷವಾಗಿತ್ತು. ಭೂಮಿ ತನ್ನಾರೆ ಪುನಶ್ಚೇತನಗೊಳ್ಳುತ್ತಿದ್ದು, ಸ್ಥಳೀಯ ವೈವಿಧ್ಯತೆ ಕಾಣಿಸುತ್ತಿದ್ದು, ನಮ್ಮನ್ನು ಪ್ರೋತ್ಸಾಹಿಸುತ್ತಿದೆ. ಹಣ್ಣಿನ ಮರಗಳಾದ ಸಪೋಟಾ, ದಾಳಿಂಬೆ, ಪಪ್ಪಾಯ, ಫ್ಯಾಷನ್ ಪ್ರೂಟ್ಸ್ ಮತ್ತು ಹಿರಳೆಕಾಯಿ ಸ್ವಲ್ಪ ಪ್ರಮಾಣದಲ್ಲಿ ಫಲ ನೀಡಲು ಆರಂಭಿಸಿದ್ದು, ಖುಷಿ ನೀಡಿದೆ.

ಐಎಲ್‌ಪಿ ಕಲಿಕಾರ್ಥಿಗಳ ಭೇಟಿ”

ಸಮಗ್ರ ಕಲಿಕಾ ತರಬೇತಿ ಪಡೆದ ಒಕ್ಕೂಟದ ಸದಸ್ಯರನ್ನು ಭೂಮಿಗೆ ಕರೆದುಕೊಂಡು ಹೋಗಿದ್ದು, ಅವರು ಭೂಮಿಯಲ್ಲಿನ ಬದಲಾವಣೆಗಳನ್ನು ನೋಡಿ ತುಂಬಾ ಖುಷಿಪಟ್ಟರು. ಕಾಡಿನ ವಿಭಾಗದಲ್ಲಿ ಅವರನ್ನೆಲ್ಲಾ ಒಳಗೊಂಡಂತೆ ಒಂದು ಸಣ್ಣ ವಿಡಿಯೋ ತೆಗೆಯಲಾಗಿದೆ. ಆ ಪ್ರದೇಶದಲ್ಲಿ ಈಗ ತುಂಬಾ ಹುಲ್ಲು, ಪೊದೆಗಳು, ಮರಗಳು ಮತ್ತು ವಿವಿಧ ರೀತಿಯ ಚಿಟ್ಟೆಗಳು, ಪಕ್ಷಿಗಳು, ಮೊಲಗಳು ಮತ್ತು ಆಗಾಗ ಬಂದು ಹೋಗುವ ಕಾಡು ಹಂದಿಗಳು ಕಾಣಿಸಿಕೊಂಡಿವೆ.